
ಕೆಂಪು ಪತ್ರ
ಹೇ ಹೇ! ಹೇಗೆ ಬರೆದೆ?
ರಕುತದೀ ಪತ್ರ?
ನಿನ್ನದೇ ಮಾಂಸದೊಳಗಿಂದ
ಎದ್ದು ಬಿದ್ದು ಎದ್ದೋಡಿ ಬಂದದ್ದೇ?
ಎದೆಯ ಕದವ ತೆರೆದು ಬಂತೇ ಈ ರಕುತ?
ಅಥವಾ…? ಅಥವಾ…!!
ಹೆಡೆ ಎತ್ತಿದ ಕೋವಿಗಳಿಂದ
ಅರೆಹೊಟ್ಟೆಯ ಭಿಕ್ಷುಗಳಿಂದ
ಖೊಟ್ಟಿ ನಶೀಬದ ಒಡಲಿನಿಂದ
ಹರಿಹರಿದೋಡಿ ಬಂತೇ…?
ಹಣೆಗೆ ಬಣ್ಣದ ಬಟ್ಟೆ ಕಟ್ಟಿದವರಿಂದ
ಹಣ- ಆಯುಧ ಝಳಪಿಸುವವರಿಂದ
ಮನವಿಲ್ಲದ ಅಮಾನವೀಯ ಗನ್ಗಳಿಂದ
ಸಿಡಿ-ಸಿಡಿದು ಬಂತೇ ಲೀಟರ್ಗಟ್ಟಲೇ…?
ಬ್ಲೂಲೈನ್ ಟೈರುಗಳ ಸಂದಿಯಿಂದ
ಒಕ್ಕಲೆಬ್ಬಿಸಿದ ಹಕ್ಕಲುಗಳಿಂದ
ನೆತ್ತರು ತುಂಬಿದ ಕಂಗಳಿಂದ
ಒಡೆದು ಹರಿದು ಬಂತೇ ಮಸಿಯಾಗಿ…?
ಕಿತ್ತೊಗೆದ ಸೆರಗುಗಳಡಿಯಿಂದ
ಕತ್ತರಿಸುರುಳಿದ ಪೇಟಗಳ ಕತ್ತುಗಳಿಂದ
ಮೇಲೆಮೇಲೇರಿದ ಬಾವುಟಗಳಡಿಯಿಂದ
ಕುದಿಕುದಿದು ಬಂತೇ…?
ಹೇಗೆ ಬಂತಿದು?
ಬಮಿಯಾನ್ ಬುದ್ಧನ ತಲೆಯಿಂದ
ಗಾಜಾಪಟ್ಟಿಯ ನರಮೇಧದಿಂದ
ಉರುಳಿಬಿದ್ದ ಕೋಟೆ ಕೊತ್ತಲು, ಕಟ್ಟಡ
ಗಳ ಅವಶೇಷಗಳಡಿಯಿಂದ.. ಬಂತೇ?
-ವೀರಣ್ಣ ಕಮ್ಮಾರ

February 16, 2009 at 2:05 pm |
ವಾವ್…ನೆತ್ತರಿನ ವರ್ಣನೆ..ಸನ್ನಿವೇಶವನ್ನ ಕಟ್ಟಿಕೊಟ್ಟಿರುವ ನಿಮ್ಮ ಕವನಕ್ಕೆ ಶಹಬ್ಬಾಸ್ ಹೇಳಲೇಬೇಕು. ದೂರದ ದೆಹಲಿ ಮತ್ತೆಂದೂ ಇಂತಹದ್ದೊಂದು ನೆತ್ತರೋಕುಳಿ ಕಾಣದಿರಲೆಂದು ಬೇಡೋಣ..
February 16, 2009 at 2:10 pm |
ಕಮ್ಮಾರರ ಕಲ್ಪನೆಯ ಕವನ ಅದ್ಬುತ. ರಕ್ತದೊಂದಿಗೆ ಇತಿಹಾಸ ಹಾಗೂ ವರ್ತಮಾನವನ್ನು ಬೆಸೆಯುವ ನಿಮ್ಮ ಯತ್ನ ಸಫಲವಾಗಿದೆ.ಅದ್ಕೆ ಹೇಳೋದು ಕತ್ತಿಗಿಂತ ಲೇಖನಿ ಹರಿತ ಅಂತ.