
ಸೀಳಿದ ಬಿಂದಿಗೆ
ಸುಂದರ ಹಸಿರು ಬೆಟ್ಟಗಳು. ರಸ್ತೆಯ ಅಕ್ಕ ಪಕ್ಕದಲ್ಲಿ ನಳನಳಿಸುವ ಗಿಡ ಮರ ಬಳ್ಳಿಗಳು. ಎಲ್ಲಿಂದಲೋ ಕೇಳಿ ಬರುವ ಪಕ್ಷಿಗಳ ಚಿಲಿಪಿಲಿ ನಿನಾದ. ಚೀನಾದ ಅಜ್ಜಿ ಬಿದಿರು ಕೋಲಿನ ಎರಡು ಕೊನೆಗಳಿಗೆ ಹಗ್ಗ ಕಟ್ಟಿ, ಹಗ್ಗಕ್ಕೆ ಮಣ್ಣಿನ ಎರಡು ಹೊಸ ಬಿಂದಿಗೆಗಳನ್ನು ಕಟ್ಟಿಕೊಂಡು, ಬಿದಿರು ಕೋಲನ್ನು ಹೆಗಲ ಮೇಲೆ ಇಟ್ಟುಕೊಂಡು, ನೀರಿಗೆ ಹೋಗುತ್ತಿದ್ದಳು.
ಪ್ರಕೃತಿ ಮಡಿಲಿನಲ್ಲಿ ಪ್ರಶಾಂತವಾಗಿರುವ ತನ್ನ ಮನೆಯಿಂದ ಆ ಅಜ್ಜಿ ಪ್ರತಿ ದಿನವೂ ಹೀಗೆ ಕೋಲಿಗೆ ನೇತುಬಿದ್ದ ಮಡಿಕೆಗಳನ್ನು ಹೊತ್ತುಕೊಂಡು ಹತ್ತಿರದ ನದಿಗೆ ನೀರು ತರಲು ಹೋಗುತ್ತಿದ್ದುದು ತಪಸ್ಸಿನಂತಿತ್ತು.
ಅದೊಂದು ದಿನ ಅಜ್ಜಿ ಎರಡು ಹೊಸ ಬಿಂದಿಗೆಗಳನ್ನು ತಂದಳು. ಜುಳು ಜುಳು ಹರಿಯುವ ನದಿಗೆ ಅತ್ಯಂತ ಸಂಭ್ರಮದಿಂದ ಇಳಿದು ಹೊಸ ಬಿಂದಿಗೆಗಳನ್ನು ನೀರು ತುಂಬಲು ಅಜ್ಜಿ ಮುಂದಾದಳು. ಆದರೆ, ಆಶ್ಚರ್ಯ! ಆಗಲೇ ಒಂದು ಬಿಂದಿಗೆ ಸ್ವಲ್ಪ ಸೀಳಿ ಬಿಟ್ಟಿದೆ. ಅದನ್ನು ಆಚೆ ಈಚೆ ಹೊರಳಿಸಿ, ನಿರ್ವಿಕಾರ ಭಾವನೆಯಿಂದ ನೋಡಿದ ಅಜ್ಜಿ ಏನೂ ಲೊಚಗುಡಲಿಲ್ಲ. ಬಿಂದಿಗೆಗಳನ್ನು ತುಂಬುವಾಗ ಡುಬು ಡುಬು ನೀರಿನ ಸದ್ದು ಕೇಳಿ ಮತ್ತಷ್ಟು ಉಲ್ಲಸಿತಳಾಗಿ ಎರಡೂ ಬಿಂದಿಗೆಗಳನ್ನು ತುಂಬಿಕೊಂಡು ತನ್ನ ಕೋಲಿಗೆ ಅವುಗಳನ್ನು ಕಟ್ಟಿಕೊಂಡು ಎಡ-ಬಲಕ್ಕೆ ಬರುವಂತೆ ಹೆಗಲ ಮೇಲಿಟ್ಟುಕೊಂಡು ಹೊರಟಳು. ಸ್ವಲ್ಪ ಸೀಳಿದ್ದ ಬಿಂದಿಗೆಯನ್ನು ತನ್ನ ಎಡಡೆಗೆ ಬರುವಂತೆ ನೋಡಿಕೊಂಡಿದ್ದಳು.
ನದಿಯಿಂದ ಮನೆಗೆ ಬರುವಷ್ಟರಲ್ಲಿ ಸೀಳಿದ್ದ ಬಿಂದಿಗೆಯಿಂದ ಅರ್ಧಕ್ಕರ್ಧ ನೀರು ಸೋರಿ ಹೋಗಿತ್ತು. ಆದರೆ, ಇನ್ನೊಂದು ಬಿಂದಿಗೆಯ ತುಂಬ ಒಂದು ಹನಿ ನೀರು ಬಿದ್ದಿರಲಿಲ್ಲ.
ಅಜ್ಜಿ ಮತ್ತು ಈ ಬಿಂದಿಗೆಗಳ ಸಹವಾಸ ಹೀಗೆಯೇ ಮುಂದುವರಿಯಿತು. ಅಜ್ಜಿ ಎಂದೂ ಸೀಳಿದ್ದ ಬಿಂದಿಗೆಯನ್ನು ಕಡಿಮೆ ಎಂದು ಭಾವಿಸಲಿಲ್ಲ. ತನ್ನ ಬಿದಿರು ಕೋಲಿನ ತಕ್ಕಡಿಯಲ್ಲಿ ಎರಡೂ ಬಿಂದಿಗೆಗಳಿಗೂ ಸಮಾನ ಅವಕಾಶ ಕೊಟ್ಟಿದ್ದಳು. ಸೋರಿ ಹೋಗುವ ಕೊಡ ಅರ್ಧ ಮಾತ್ರ ನೀರನ್ನು ಕೊಡುತ್ತದೆ ಎಂದು ಅರ್ಧ ನೀರನಷ್ಟೇ ಅದರಲ್ಲಿ ತುಂಬುತ್ತಿರಲಿಲ್ಲ. ಪೂರ್ತಿ ನೀರನ್ನು ತುಂಬುತ್ತಿದ್ದಳು. ಸೋರಿದರೆ ಸೋರಲಿ- ಏನೀಗ? ಎಂಬಂಥ ಭಾವ ಅಜ್ಜಿಯದು.
ಆದರೆ, ಎರಡೂ ಬಿಂದಿಗೆಗಳ ನಡುವೆ ಮೇಲು ಕೀಳುತನ ಬೆಳೆಯಿತು. ಪೂರ್ತಿ ನೀರನ್ನು ತುಂಬಿಕೊಂಡು ಹೋಗುತ್ತಿದ್ದ ಬಿಂದಿಗೆ ಹೆಮ್ಮೆಯಿಂದ ಬೀಗುತ್ತಿತ್ತು. ಅರ್ಧ ಮಾತ್ರ ನೀರನ್ನು ಮನೆವರೆಗೆ ಕೊಂಡೊಯ್ಯುತ್ತಿದ್ದ ಬಿಂದಿಗೆ ಅವಮಾನದಿಂದ ಕುಗ್ಗುತ್ತಿತ್ತು. ಅದು ನಾಚಿಕೆಯಿಂದ ತಲೆ ತಗ್ಗಿಸಿಕೊಳ್ಳುತ್ತಿತ್ತು. ತಾನು ಇಡೀ ಕೊಡದ ತುಂಬ ನೀರನ್ನು ತರಲು ನಿರ್ಮಾಣಗೊಂಡಿದ್ದೇನೆ. ಆದರೆ, ಕೇವಲ ಅರ್ಧ ನೀರನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇದು ನನಗೆ ಅವಮಾನ! ನನ್ನ ಕುಲಕ್ಕೆ ಅವಮಾನ! ಎಂದು ಆ ಸೀಳಿಹೋಗಿದ್ದ ಬಿಂದಿಗೆ ವೇದನೆ ಪಡುತ್ತಿತ್ತು.
ಅಂದು ಅಜ್ಜಿ ನೀರು ತರಲೆಂದು ಹೆಜ್ಜೆ ಇಡುತ್ತಿದ್ದಳು. ಪಕ್ಕದಲ್ಲಿ ಯಾರೋ ನಿಧಾನವಾಗಿ ಮಾತಾಡಿದ ಹಾಗಾಯಿತು. ಅಜ್ಜಿ ಅತ್ತಿತ್ತ ನೋಡಿದಳು. ಆದರೆ, ಯಾರೂ ಹತ್ತಿರದಲ್ಲಿ ಕಾಣಿಸಲಿಲ್ಲ. ಮತ್ತೆ ಧ್ವನಿ ಬಂದತ್ತ ನೋಡಿದಳು. ತನ್ನ ಎಡ ಪಕ್ಕದ ಬಿಂದಿಗೆ ಮಾತಾಡುತ್ತಿತ್ತು. ಅದು ನಿಧಾನಕ್ಕೆ ಹೇಳಿತು- ಅಜ್ಜಿ, ನಾನು ಸೀಳಿ ಹೋದ ಬಿಂದಿಗೆ. ನಾನು ತುಂಬ ನೀರನ್ನು ತೆಗೆದುಕೊಂಡು ಹೋಗಲು ಅಶಕ್ತ. ನನ್ನಿಂದ ನೀರಿನಲ್ಲಿ ಅರ್ಧದಷ್ಟು ಸೋರಿ ಹೋಗುತ್ತದೆ. ಇದು ನನಗೆ ಹಿಂಸೆ ಎನಿಸುತ್ತದೆ. ಆದರೂ ನೀನು ಯಾಕೆ ಛಲ ಬಿಡದ ತ್ರಿವಿಕ್ರಮನಂತೆ ನನ್ನನ್ನೇ ಹೊತ್ತುಕೊಂಡು ಹೋಗುತ್ತೀಯಾ?
ಅಜ್ಜಿ ನಸು ನಕ್ಕಳು. ಬಿಂದಿಗೆಗೆ ಇನ್ನೂ ಅವಮಾನವಾದಂತಾಯಿತು. ಅಜ್ಜಿ ಬಿಂದಿಗೆಗಳನ್ನು ಕೆಳಗೆ ಇಳಿಸಿ, ಸೀಳಿ ಹೋದ ಬಿಂದಿಗೆಯತ್ತ ನೋಡುತ್ತ ’ದಾರಿಯಲ್ಲಿ ನೋಡಿದೆಯಾ? ನೀನಿರುವ ಕಡೆಯಲ್ಲಿ ಎಷ್ಟೊಂದು ಹೂವುಗಳು ಬೆಳೆದಿವೆಯಂತ? ಇನ್ನೊಂದು ಕಡೆಯ ರಸ್ತೆ ಬದಿಯಲ್ಲಿ ನೋಡು ಅಲ್ಲಿ ಹೂವುಗಳೇ ಬೆಳೆದಿಲ್ಲ.’
ಸೀಳು ಬಿಂದಿಗೆ ಮೂಕವಿಸ್ಮಿತವಾಯಿತು. ಹೌದಲ್ಲ! ಎಂದುಕೊಂಡಿತು. ಅಜ್ಜಿ ಮಾತು ಮುಂದುವರಿಸಿದಳು. ’ನನಗೆ ಮೊದಲ ದಿನವೇ ನೀನು ಸೀಳು ಬಿಂದಿಗೆ ಎಂಬುದು ಗೊತ್ತಾಯಿತು. ಆದ್ದರಿಂದ ಮರು ದಿನದಿಂದಲೇ ನೀನಿರುವ ಕಡೆ ಹೂವಿನ ಸಸಿಗಳನ್ನು ನೆಡಲು ಪ್ರಾರಂಭಿಸಿದೆ. ಪ್ರತಿ ದಿನ ನಾನು ನಿನ್ನನ್ನು ಹೊತ್ತುಕೊಂಡು ಹೋಗುವಾಗ ನಿನ್ನಿಂದ ನೀರು ಸೋರಿ ಆ ಗಿಡಗಳಿಗೆ ಬಿದ್ದಿದೆ. ಅವುಗಳೆಲ್ಲ ನೀನು ಪ್ರತಿ ದಿನವೂ ಸುರಿಸುವ ನೀರಿಗಾಗಿಯೇ ಭಗೀರಥನಂತೆ ಕಾಯುತ್ತಿದ್ದವು. ನೀನುಣಿಸಿದ ನೀರನ್ನುಂಡು ಅವುಗಳೆಲ್ಲ ಎಷ್ಟೊಂದು ಸೊಗಸಾಗಿ ಬೆಳೆದಿವೆ ನೋಡು. ಅವುಗಳಲ್ಲಿ ಈಗ ಸಾಕಷ್ಟು ಹೂವುಗಳು ಬೆಳೆದಿವೆ. ಆ ಸುಂದರ, ಸುಗಂಧಭರಿತ ಹೂವುಗಳನ್ನು ನಾನು ದಿನವೂ ತೆಗೆದುಕೊಂಡು ಹೋಗಿ ಮನೆಯಲ್ಲಿ ಅಲಂಕರಿಸುತ್ತೇನೆ. ಇಷ್ಟು ದಿನಗಳಿಂದಲೂ ಅವು ನನಗೆ ಅಪಾರ ಸಂತಸ ನೀಡುತ್ತಿವೆ. ನೀನು ಕೂಡ ಉತ್ತಮ ಕೊಡವೇ ಆಗಿದ್ದು, ಒಂದಿನಿತೂ ನೀರನ್ನು ಚೆಲ್ಲದೇ ಹೋಗಿದ್ದರೆ, ಇಲ್ಲಿ ಈ ಹೂವುಗಳೇ ತಲೆ ಎತ್ತುತ್ತಿರಲಿಲ್ಲ. ನಾನು ಅವುಗಳನ್ನು ಪ್ರತಿದಿನವೂ ಮನೆತುಂಬ ಅಲಂಕರಿಸುತ್ತಲೂ ಇಲ್ಲ’.
’ಪ್ರತಿಯೊಬ್ಬರಿಗೂ ಅವರದೇ ಆದ ಕುಂದು ಕೊರತೆ ಇರುತ್ತದೆ. ನಿನಗೆ ಅದು ಆ ಸೀಳಿನ ರೂಪದಲ್ಲಿ ಇದೆ. ಇನ್ನೂ ಅನೇಕರಿಗೆ ಬೇರೆ ಬೇರೆ ರೂಪದಲ್ಲಿರುತ್ತದೆ. ಇಂತಹ ಸೀಳು, ಅಂತಹ ಕೊರತೆಗಳೇ ನಮ್ಮನ್ನು ಅತ್ಯಂತ ವಿಶಿಷ್ಟವನ್ನಾಗಿ ಮಾಡುತ್ತವೆ; ಅವುಗಳೇ ನಮಗೆ ಸಾಕಷ್ಟು ಪುರಸ್ಕಾರಗಳನ್ನು ಮರ್ಯಾದೆಯನ್ನು ತಂದುಕೊಡುತ್ತವೆ ಎಂಬುದನ್ನು ಮರೆಯಬೇಡ’
ಅಜ್ಜಿಯ ಮಾತಿನಿಂದ ಆನಂದ ತುಂದಿಲವಾದಂತೆ ಕಂಡು ಬಂದ ಬಿಂದಿಗೆಯು ಅಜ್ಜಿಯನ್ನು ಆದರತೆಯಿಂದ ನೋಡುತ್ತಿತ್ತು. ಅಜ್ಜಿ ಮಾತು ಮುಂದುವರಿಸಿದಳು.
’ನಾವು ಪ್ರತಿಯೊಬ್ಬ ವ್ಯಕ್ತಿಗಳನ್ನು ಅವರೇನಾಗಿದ್ದಾರೆ ಮತ್ತು ಅವರಲ್ಲಿ ಯಾವ ಒಳ್ಳೆಯ ಗುಣಗಳಿವೆ ಎಂಬುದನ್ನು ಹುಡುಕಬೇಕು. ಒಳ್ಳೆಯತನವನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹಿಸಬೇಕು’ ಎಂದು ಹೇಳುತ್ತಿದ್ದಂತೇ ಸೀಳು ಬಿಂದಿಗೆ ಕೂಗಿ ಹೇಳಿತು- ’ಓ ನನ್ನೆಲ್ಲ ಸೀಳು ಬಿಂದಿಗೆಗಳೇ, ನಮಗಿರುವುದು ಒಂದು ಕೊರತೆ ಎಂದು ಭಾವಿಸಬೇಡಿ. ಅದು ನಮ್ಮ ವಿಶೇಷ ಗುಣ. ಇಂತಹ ಒಳ್ಳೆಯ ಮತ್ತು ವಿಶೇಷ ಗುಣಗಳನ್ನು ಇತರಲ್ಲಿದ್ದರೆ ಅವುಗಳನ್ನು ಪತ್ತೆ ಹಚ್ಚಿರಿ ಮತ್ತು ಅದಕ್ಕೆ ಪ್ರೋತ್ಸಾಹವನ್ನು ನೀಡಿರಿ. ಬಿಂದಿಗೆಯಲ್ಲಿ ಸೀಳಿದ್ದರೆ ಅದರಿಂದ ಒಳ್ಳೆಯ ಹೂವುಗಳು ಬರಲು ಸಾಧ್ಯವಿದೆ, ಎಲ್ಲರೂ ಉತ್ತಮ ಸುಗಂಧವನ್ನು ಸವಿಯಲು ಸಾಧ್ಯವಿದೆ’!
ಆ ಕ್ಷಣದಲ್ಲಿ ಎಲ್ಲೆಲ್ಲಿಯೋ ಅಡಗಿದ್ದ ಕುಂದು ಕೊರತೆಗಳಿದ್ದ ನೂರಾರು ಬಿಂದಿಗೆಗಳು ಅಲ್ಲಿ ಸೇರಿದವು. ತಮ್ಮತನವನ್ನು ಸಾರಲು ಅವು ಎಲ್ಲ ದಿಕ್ಕುಗಳಿಗೂ ಹೊರಟವು.
* * *
ಇದು ಇಂಟರ್ ನೆಟ್ ಕತೆ
e mail: veerannakumar@gmail.com
Posted by veerannakumar
ಆ ಯುವಕನ ಮನೆಯ ತುಂಬೆಲ್ಲ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳು. ಕಾಲು ಚಾಚಿದರೆ ತೊಡರುಕೊಳ್ಳುತ್ತಿದ್ದವು. ಅಂಥವುಗಳಿಂದ ಹೊರ ಬರಬೇಕೆಂದರೆ ಒಂದೇ ದಾರಿ- ಅದು ಉದ್ಯೋಗವನ್ನು ಹುಡುಕುವುದು ಎಂದು ನಿರ್ಧರಿಸಿದ ಆತ ಅಂದಿನ ಪತ್ರಿಕೆಗಳ ’ಸಿಚುವೇಷನ್ ವೆಕೆಂಟ್’ ಕಾಲಂನತ್ತ ಕಣ್ಣು ಹಾಯಿಸಿದ. ವಿಶ್ವ ವಿಖ್ಯಾತ ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ’ಆಫೀಸ್ ಬಾಯ್’ ಹುದ್ದೆಗೆ ಕರೆ ಮಾಡಿದ್ದರು. ತಕ್ಷಣ ಅದಕ್ಕೆ ಅರ್ಜಿ ಗುಜರಾಯಿಸಿದ.
Posted by veerannakumar
Posted by veerannakumar 
